ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್ ಅವರ ಪುತ್ರ ಓಂ ಪ್ರಕಾಶ್ ನಾಯಕ್ ಅವರೀಗ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಭಾರತದ ಹಿಂದುಳಿದ ಭಾಷೆಗಳಲ್ಲ್ಲೊಂದಾದ ಲಂಬಾಣಿ ಭಾಷೆಯಲ್ಲಿ ಏಕ್ ಛೋರಿರ್ ಸಾಕಿ (ಒಂದು ಹುಡುಗಿ ಕಥೆ) ಎಂಬ ಸಿನಿಮಾ ಮಾಡಲು ಹೊರಟಿದ್ದು ಬಂಜಾರ (ಲಂಬಾಣಿ) ಜನಾಂಗದ ವೈಶಿಷ್ಟ್ಯತೆ, ಲವ್ ಹಾಗೂ ಸೆಂಟಿಮೆಂಟ್ ಕಥೆಯನ್ನು ಹೊಂದಿರುವ ಈ ಚಿತ್ರಕ್ಕೆ ರವಿ ಕೀರ್ತಿ ಸಂಗೀತ ಸಂಯೋಜಿಸಿರುವ ಐದು ಹಾಡುಗಳ ಧ್ವನಿಮುದ್ರಣಕಾರ್ಯ ಕಳೆದ ಶುಕ್ರವಾರದಂದು ಯಶವಂತಪುರದ ಮಧುರ ಸ್ಟುಡಿಯೋದಲ್ಲಿ ನೆರವೇರಿತು. ಹಿರಿಯ ಗಾಯಕಿ ಬಿ.ಕೆ. ಸುಮಿತ್ರ ಹಾಗೂ ವಸಂತ್ ಪಿ ಕಾಳಿಂಗರಾವ್ ರವರ ಧ್ವನಿಯಲ್ಲಿ ಈ ಚಿತ್ರಕ್ಕೆ ಹಾಡುಗಳನ್ನು ಧ್ವನಿಮುದ್ರಿಸಿಕೊಳ್ಳಲಾಯಿತು.
ಮಾದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರ ಓಂ ಪ್ರಕಾಶ್ ನಾಯಕ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಹಾಡುಗಳನ್ನು ಬರೆದಿದ್ದಾರೆ. ವಿಶ್ವನಾಥ ಚೌಧರಿ ಅವರ ಛಾಯಾಗ್ರಹಣ, ರವಿ ಕೀರ್ತಿ ಅವರ ಸಂಗೀತ, ರಾಜಶೇಖರ ರೆಡ್ಡಿ ಸಂಕಲನ ಈ ಚಿತ್ರಕ್ಕಿದೆ. ಓಂ ಪ್ರಕಾಶ್ ನಾಯಕ್, ನಚಿಕೇತ್, ಮುನಿರಾಜು ಚಿತ್ರದ ಮೂವರು ನಾಯಕರಾಗಿದ್ದು ಮೊನಿಷಾ ನಾಯಕಿ ಪಾತ್ರ ನಿರ್ವಹಿಸಲಿದ್ದಾರೆ. ಬಿ.ಟಿ. ಲಲಿತನಾಯಕ್, ರಾಜುನಾಯಕ್, ರೂಪ್ಯಾನಾಯಕ್, ಬಾಬು ಹಾಗೂ ಸಿದ್ಧರಾಜು ಉಳಿದ ತಾರಾಣಗದಲ್ಲಿದ್ದಾರೆ.